ಕರ್ನಾಟಕ ಬಜೆಟ್ 2026-27: ಧಾರವಾಡ ಜಿಲ್ಲೆಯ ಪಾಲಿಗೆ ಸಿಕ್ಕಿದ್ದೇನು? ಇಲ್ಲಿದೆ ವಿವರ

Spread the love

ಧಾರವಾಡ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಿದ 2026-27ನೇ ಸಾಲಿನ ಕರ್ನಾಟಕ ಬಜೆಟ್‌ನಲ್ಲಿ ಶೈಕ್ಷಣಿಕ ಕಾಶಿ ಧಾರವಾಡ ಜಿಲ್ಲೆಗೆ ಗರಿಷ್ಠ ಆದ್ಯತೆ ನೀಡಲಾಗಿದೆ. ಜಿಲ್ಲೆಯ ಜನತೆಯ ಬಹುದಿನಗಳ ಬೇಡಿಕೆಗಳಿಗೆ ಸ್ಪಂದಿಸಿರುವ ಸರ್ಕಾರ, ಶಿಕ್ಷಣ, ಉದ್ಯೋಗ ಮತ್ತು ತಂತ್ರಜ್ಞಾನ ಆಧಾರಿತ ಅಭಿವೃದ್ಧಿಗೆ ಭರಪೂರ ಅನುದಾನ ಘೋಷಿಸಿದೆ.

ನ್ಯಾಯಾಂಗ ಮತ್ತು ಶಿಕ್ಷಣಕ್ಕೆ ಹೈಟೆಕ್ ಸ್ಪರ್ಶ:

ಧಾರವಾಡ ಜಿಲ್ಲೆಯ ನ್ಯಾಯಾಂಗ ವ್ಯವಸ್ಥೆಯನ್ನು ಆಧುನೀಕರಿಸಲು 110 ಕೋಟಿ ರೂಪಾಯಿ ವೆಚ್ಚದಲ್ಲಿ ಪ್ರಾಯೋಗಿಕವಾಗಿ ‘ಇ-ಕೋರ್ಟ್’ ಸ್ಥಾಪನೆಗೆ ನಿರ್ಧರಿಸಲಾಗಿದೆ. ಇನ್ನು ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಜಿಲ್ಲೆಯಲ್ಲಿ 110 ಕೋಟಿ ರೂಪಾಯಿ ವೆಚ್ಚದಲ್ಲಿ ಅತ್ಯಾಧುನಿಕ ಡಿಜಿಟಲ್ ಲೈಬ್ರರಿ ಮತ್ತು ಅಧ್ಯಯನ ಕೇಂದ್ರ ನಿರ್ಮಾಣವಾಗಲಿದೆ. ಐಐಟಿ ಧಾರವಾಡದ ಸಹಯೋಗದೊಂದಿಗೆ ಶಾಲಾ ಮಕ್ಕಳಿಗೆ ಕೃತಕ ಬುದ್ಧಿಮತ್ತೆ (AI) ತರಬೇತಿ ನೀಡಲು 75 ಕೋಟಿ ರೂಪಾಯಿ ಮೀಸಲಿಡಲಾಗಿದ್ದು, ಜಿಲ್ಲೆಯ ಶೈಕ್ಷಣಿಕ ಗುಣಮಟ್ಟಕ್ಕೆ ಹೊಸ ಬಲ ಬಂದಿದೆ. ಉನ್ನತ ಶಿಕ್ಷಣ ಪಡೆಯುವವರಿಗಾಗಿ ಜಿಲ್ಲೆಯಲ್ಲಿ ಹೊಸದಾಗಿ 50 ಮೆಟ್ರಿಕ್ ನಂತರದ ವಿದ್ಯಾರ್ಥಿನಿಲಯಗಳ ನಿರ್ಮಾಣಕ್ಕೂ ಚಾಲನೆ ನೀಡಲಾಗಿದೆ.

ಯುವಜನತೆಗೆ ಬೃಹತ್ ಕೌಶಲ ಅಕಾಡೆಮಿ:

ಜಿಲ್ಲೆಯ ನಿರುದ್ಯೋಗಿ ಯುವಕರಿಗೆ ಆಶಾದಾಯಕವಾಗಿರುವ 7,200 ಕೋಟಿ ರೂಪಾಯಿ ಅಂದಾಜು ವೆಚ್ಚದ ಅತ್ಯಾಧುನಿಕ ಕೌಶಲ ತರಬೇತಿ ಅಕಾಡೆಮಿ (Skill Training Academy) ಹುಬ್ಬಳ್ಳಿ-ಧಾರವಾಡ ಪ್ರದೇಶದಲ್ಲಿ ಸ್ಥಾಪನೆಯಾಗಲಿದೆ. ಇದು ಕೈಗಾರಿಕಾ ಕ್ಷೇತ್ರದಲ್ಲಿ ಜಿಲ್ಲೆಯ ಯುವಕರಿಗೆ ಹೆಚ್ಚಿನ ಉದ್ಯೋಗಾವಕಾಶಗಳನ್ನು ಸೃಜಿಸಲಿದೆ. ಕೈಗಾರಿಕಾ ಚಟುವಟಿಕೆಗಳನ್ನು ಉತ್ತೇಜಿಸಲು ಸರ್ಕಾರವು ಪೂರಕ ಕ್ರಮಗಳನ್ನು ಕೈಗೊಳ್ಳುವುದಾಗಿ ಘೋಷಿಸಿರುವುದು ಜಿಲ್ಲೆಯ ಆರ್ಥಿಕತೆಗೆ ಚೈತನ್ಯ ನೀಡಲಿದೆ.

ರೈತರು ಮತ್ತು ಸಾರಿಗೆಗೆ ಆದ್ಯತೆ:

ಧಾರವಾಡ ರೈತರ ಬಹುದಿನಗಳ ನೋವಾಗಿದ್ದ ಬೆಣ್ಣಿಹಳ್ಳ ಪ್ರವಾಹ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ಕಾಮಗಾರಿಗಳಿಗೆ ಬಜೆಟ್‌ನಲ್ಲಿ ಆದ್ಯತೆ ನೀಡಲಾಗಿದೆ. ಸಾರಿಗೆ ವಿಭಾಗದಲ್ಲಿ ಜಿಲ್ಲೆಗೆ ಹೊಸ ಬಸ್‌ಗಳ ಸೇರ್ಪಡೆಯಾಗಲಿದ್ದು, ‘ಶಕ್ತಿ’ ಯೋಜನೆಯ ಮುಂದುವರಿಕೆಗಾಗಿ ರಾಜ್ಯಾದ್ಯಂತ 75,300 ಕೋಟಿ ರೂಪಾಯಿ ಮೀಸಲಿಟ್ಟಿರುವುದು ಜಿಲ್ಲೆಯ ಮಹಿಳಾ ಪ್ರಯಾಣಿಕರಿಗೆ ವರದಾನವಾಗಲಿದೆ.

​ಒಟ್ಟಾರೆಯಾಗಿ, ಈ ಬಜೆಟ್ ಧಾರವಾಡ ಜಿಲ್ಲೆಯನ್ನು ಡಿಜಿಟಲ್ ಹಾಗೂ ಕೌಶಲ ಕೇಂದ್ರವಾಗಿ ರೂಪಿಸುವತ್ತ ಸ್ಪಷ್ಟ ಹೆಜ್ಜೆ ಇರಿಸಿದೆ.

Leave a Reply

Your email address will not be published. Required fields are marked *