ಬೆಲಿಯೇ ಎದ್ದು ಹೋಲ ಮೈದರೆ ಇನ್ನು ಯಾರ ಮೇಲೆ ನಂಬಿಕೆ: ನಿಂಬರ್ಗಾ ಗ್ರಾಪಂ ಅಧ್ಯಕ್ಷ, ಉಪಾಧ್ಯಕ್ಷ ಸೇರಿ ಏಳು ಮಂದಿ ಸದಸ್ಯತ್ವ ರದ್ದು!

Spread the love

ಕಾನೂನು ಬಾಹಿರ ಚಟುವಟಿಕೆ ಮತ್ತು ಭ್ರಷ್ಟಾಚಾರ ಸಾಬೀತು; ಆರು ವರ್ಷ ಚುನಾವಣೆಗೆ ಸ್ಪರ್ಧಿಸದಂತೆ ಅನರ್ಹ

ಆಳಂದ: ಪ್ರಜಾಪ್ರಭುತ್ವದ ತಳಹದಿಯಾದ ಗ್ರಾಮ ಪಂಚಾಯಿತಿಯಲ್ಲಿಯೇ ಭ್ರಷ್ಟಾಚಾರ ಮತ್ತು ಕಾನೂನು ಬಾಹಿರ ಚಟುವಟಿಕೆಗಳು ಸಾಬೀತಾದ ಘಟನೆ ಆಳಂದ ತಾಲ್ಲೂಕಿನ ನಿಂಬರ್ಗಾ ಗ್ರಾಮ ಪಂಚಾಯಿತಿಯಲ್ಲಿ ನಡೆದಿದ್ದು, ಅಧ್ಯಕ್ಷರು, ಉಪಾಧ್ಯಕ್ಷರು ಸೇರಿದಂತೆ ಒಟ್ಟು ಏಳು ಜನರ ಸದಸ್ಯತ್ವವನ್ನು ರದ್ದುಪಡಿಸಲಾಗಿದೆ. ಈ ಮೂಲಕ ‘ಕಾವಲುಗಾರನೇ ಕಳ್ಳನಾದರೆ ಇನ್ನು ಯಾರ ಮೇಲೆ ನಂಬಿಕೆ ಇಡಬೇಕು’ ಎಂಬ ಪ್ರಶ್ನೆ ಗ್ರಾಮಸ್ಥರಲ್ಲಿ ಮೂಡಿದೆ. ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಣ ಅಧಿಕಾರಿ (ಇಒ) ಮಾನಪ್ಪ ಕಟ್ಟಿಮನಿ ಅವರು ಈ ಬಗ್ಗೆ ಬುಧವಾರ ಕಚೇರಿಯಲ್ಲಿ ಮಾಹಿತಿ ನೀಡಿದ್ದಾರೆ.

ಸದಸ್ಯತ್ವ ರದ್ದಾದವರ ವಿವರ ಮತ್ತು ಭ್ರಷ್ಟಾಚಾರದ ಪ್ರಮಾಣ

​ಸದಸ್ಯತ್ವ ಕಳೆದುಕೊಂಡವರಲ್ಲಿ ಅಧ್ಯಕ್ಷೆ ರೇಖಾಬಾಯಿ ಚವ್ಹಾಣ್ ಮತ್ತು ಉಪಾಧ್ಯಕ್ಷ ಅಪ್ಪಾಸಾಬ್ ಪ್ರಮುಖರಾಗಿದ್ದಾರೆ. ಇದರ ಜೊತೆಗೆ ಸದಸ್ಯರಾದ ಕಾರ್ತಿಕ, ಸುರೇಖಾ ಜಿಡಗಿ, ಸುರೇಖಾ ಎಸ್., ಯಂಕಪ್ಪ ಬಸಪಟ್ಟಿ, ಮತ್ತು ಲಲಿತಾಬಾಯಿ ಎಚ್. ಅವರ ಸದಸ್ಯತ್ವವೂ ರದ್ದುಗೊಂಡಿದೆ. ಇಒ ಮಾನಪ್ಪ ಕಟ್ಟಿಮನಿ ಅವರ ಮಾಹಿತಿ ಪ್ರಕಾರ, 2023ರ ಮಾರ್ಚ್ 31ರವರೆಗೆ ಒಟ್ಟು 27,38,095 ರೂ. ಖರ್ಚು ಮಾಡಲಾಗಿದ್ದು, ಇದರಲ್ಲಿ ಏಳು ಏಜೆನ್ಸಿಗಳ ಹೆಸರಿಗೆ ಟೆಂಡರ್ ನಿಯಮ ಉಲ್ಲಂಘಿಸಿ 12,39,875 ರೂ. ಪಾವತಿ ಮಾಡಿರುವುದು ಸಾಬೀತಾಗಿದೆ.

ವೈಯಕ್ತಿಕ ಲಾಭಕ್ಕಾಗಿ ಚೆಕ್ ಮೂಲಕ ಹಣ ಸ್ವೀಕಾರ

​ಇದೇ ಅವಧಿಯಲ್ಲಿ ಅಧ್ಯಕ್ಷೆ ರೇಖಾಬಾಯಿ ಹೆಸರಿನಲ್ಲಿ 7,000 ರೂ., ಉಪಾಧ್ಯಕ್ಷ ಅಪ್ಪಾಸಾಬ್ ಅವರ ಪತ್ನಿ ಹೆಸರಿನಲ್ಲಿ 13,800 ರೂ. ಮತ್ತು ಇತರೆ ಸದಸ್ಯರಾದ ಕಾರ್ತಿಕ್ (7,000 ರೂ.), ಸುರೇಖಾ ಜಿಡಗಿ (2,800 ರೂ.), ಸುರೇಖಾ ಎಸ್. (6,500 ರೂ.), ಯಂಕಪ್ಪ ಬಸಪಟ್ಟಿ (8,000 ರೂ.), ಹಾಗೂ ಲಲಿತಾಬಾಯಿ (5,640 ರೂ.) ಸೇರಿ ಒಟ್ಟು 49,740 ರೂ.ಗಳನ್ನು ಚೆಕ್ ರೂಪದಲ್ಲಿ ವೈಯಕ್ತಿಕ ಲಾಭಕ್ಕಾಗಿ ಪಡೆದಿರುವುದು ದೃಢಪಟ್ಟಿದೆ.

ಕಾನೂನು ಉಲ್ಲಂಘನೆ ಮತ್ತು ಮುಂದಿನ ಕ್ರಮ

​ಗ್ರಾಮ ಪಂಚಾಯಿತಿಯಲ್ಲಿ ನಡೆದ ಈ ಅವ್ಯವಹಾರಗಳ ಕುರಿತು ವಿಠಲ್ ಕೋಣಿಕರ್ ಅವರು 2023ರ ಅಕ್ಟೋಬರ್ 10 ರಂದು ದೂರು ನೀಡಿದ್ದರು. ಇದರ ಪರಿಶೀಲನೆಯ ನಂತರ, ಕರ್ನಾಟಕ ಗ್ರಾಮ ಸ್ವರಾಜ್ಯ ಮತ್ತು ಪಂಚಾಯತ್ ಅಧಿನಿಯಮ 1993ರ ಪ್ರಕರಣ 43ಎ(ವಿ) ಅನ್ನು ಸ್ಪಷ್ಟವಾಗಿ ಉಲ್ಲಂಘಿಸಿರುವುದು ದೃಢಪಟ್ಟಿದೆ. ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆ ಕಾರ್ಯದರ್ಶಿ ರಣದೀಪ್ ಡಿ. ಅವರು ಈ ಬಗ್ಗೆ ಪರಿಶೀಲನೆ ನಡೆಸಿದ್ದು, 2020-21ನೇ ಸಾಲಿನ 14 ಮತ್ತು 15ನೇ ಹಣಕಾಸು ಯೋಜನೆಯಲ್ಲಿ ನಡೆದ ಅವ್ಯವಹಾರದ ಹಣವನ್ನು ನವೆಂಬರ್ 11 ರಂದು ಸಮಾನ ಕಂತುಗಳಲ್ಲಿ ವಸೂಲಿ ಮಾಡಿ, ಆ ಹಣವನ್ನು ಸಂಬಂಧಪಟ್ಟ ಲೆಕ್ಕ ಶೀರ್ಷಿಕೆಗಳಿಗೆ ಜಮಾ ಮಾಡುವಂತೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ. ಅಲ್ಲದೆ, ಈ ಏಳು ಜನರನ್ನು ಮುಂದಿನ ಆರು ವರ್ಷಗಳ ಕಾಲ ಚುನಾವಣೆಗೆ ನಿಲ್ಲದಂತೆ ಅನರ್ಹಗೊಳಿಸಿ ಆದೇಶ ಹೊರಡಿಸಲಾಗಿದೆ ಎಂದು ಮಾನಪ್ಪ ಕಟ್ಟಿಮನಿ ಮಾಹಿತಿ ನೀಡಿದ್ದಾರೆ.

Leave a Reply

Your email address will not be published. Required fields are marked *