
25 ವರ್ಷಗಳ ನಂತರ ಹಳೆಯ ವಿದ್ಯಾರ್ಥಿಗಳಿಂದ ಗುರು ವಂದನಾ ಕಾರ್ಯಕ್ರಮ, ಗುರುಗಳಿಗೆ ಸನ್ಮಾನಿಸಿ ಗೌರವಿಸಿ ಆರ್ಶಿವಾದ ಪಡೆದುಕೊಂಡ ವಿದ್ಯಾರ್ಥಿಗಳು,
ಹುಬ್ಬಳ್ಳಿ: ಗೋಪನಕೊಪ್ಪದ ಸರ್ಕಾರಿ ಹಿರಿಯ ಪ್ರೌಢ ಶಾಲೆಯ 1998-99ನೇ ಸಾಲಿನ 10ನೇ ತರಗತಿಯ ವಿದ್ಯಾರ್ಥಿಗಳು 25 ವರ್ಷಗಳ ನಂತರ ಒಗ್ಗೂಡಿ ಗುರು ವಂದನಾ ಹಾಗೂ ಸ್ನೇಹ ಸಮ್ಮೇಳನ ಕಾರ್ಯಕ್ರಮವನ್ನು ಆಯೋಜಿಸಿದ್ದರು. ಈ ವಿಶೇಷ ಕಾರ್ಯಕ್ರಮದಲ್ಲಿ ಹಳೆಯ ವಿದ್ಯಾರ್ಥಿಗಳು ತಮ್ಮ ಗುರುಗಳಿಗೆ ಗೌರವ ಸಲ್ಲಿಸಿದರು.
ಈ ಬ್ಯಾಚ್ನ ವಿದ್ಯಾರ್ಥಿ ಹಾಗೂ ಹುಬ್ಬಳ್ಳಿ ಪತ್ರಿಕಾ ವಿತರಕರ ಸಂಘದ ಉಪಾಧ್ಯಕ್ಷ ಹನುಮಂತ ಮೆಣಸಿನಕಾಯಿ ಮಾತನಾಡಿ, “ನಮ್ಮ ಕಾಲದಲ್ಲಿ ಶಿಕ್ಷಣ ಪದ್ಧತಿ ಅತ್ಯಂತ ಕಠಿಣವಾಗಿತ್ತು. ‘ಗುರುವಿನ ಗುಲಾಮನಾಗುವ ತನಕ ದೊರೆಯದು ಮುಕ್ತಿ’ ಎಂಬ ನಾಣ್ಣುಡಿಯಂತೆ, ನಮ್ಮ ಶಿಕ್ಷಕರು ದಂಡನೆಯ ಮೂಲಕವೂ ಉತ್ತಮ ಶಿಕ್ಷಣವನ್ನು ನೀಡುತ್ತಿದ್ದರು. ಆಗಿನ ಶಿಕ್ಷಣಕ್ಕೆ ಹೋಲಿಸಿದರೆ ಈಗಿನ ಶಿಕ್ಷಣ ವ್ಯವಸ್ಥೆ ಬಹಳ ಬದಲಾಗಿದೆ. ಇಂದಿನ ವಿದ್ಯಾರ್ಥಿಗಳು ಮೊಬೈಲ್ ಗೀಳಿಗೆ ಬಲಿಯಾಗುತ್ತಿರುವುದರಿಂದ ಅವರ ಜೀವನ ಅಯೋಮಯವಾಗುತ್ತಿದೆ” ಎಂದು ಬೇಸರ ವ್ಯಕ್ತಪಡಿಸಿದರು.
ಹಳೆಯ ವಿದ್ಯಾರ್ಥಿಗಳು ತಮ್ಮ ಗುರುಗಳಿಗೆ ಸನ್ಮಾನಿಸಿ ಗೌರವಿಸಿ ಆಶೀರ್ವಾದ ಪಡೆದುಕೊಂಡದ್ದು ಕಾರ್ಯಕ್ರಮದ ವಿಶೇಷವಾಗಿತ್ತು.
ಈ ಸಂದರ್ಭದಲ್ಲಿ ಕೆ ಎಂ ದೊಡ್ಡಮನಿ, ಸುಮಂಗಲ ಕುಲಕರ್ಣಿ, ಪುಪ್ಷ ಗಂಜಿ, ಪದ್ಮಶ್ರೀ ಪಾಟೀಲ, ವಿಜಯಕುಮಾರ್, ಆನಂದಪ್ಪ ಸೇರಿದಂತೆ ಈ ಸಾಲಿನ ಹಲವಾರು ವಿದ್ಯಾರ್ಥಿಗಳು ಭಾಗವಿಸಿದ್ದರು.

