
ಸಂಶಯದ ಭೂತ: ಸಾರಿಗೆ ಕಂಡಕ್ಟರ್ನಿಂದ ಪತ್ನಿ ಬರ್ಬರ ಹತ್ಯೆ; ಮೂವರು ಮಕ್ಕಳು ಅನಾಥ
ಗದಗ: ಪತ್ನಿಯ ನಡತೆ ಬಗ್ಗೆ ಸಂಶಯ ಹೊಂದಿದ್ದ ಸಾರಿಗೆ ಸಂಸ್ಥೆಯ ಕಂಡಕ್ಟರ್ ಒಬ್ಬರು ಆಕೆಗೆ ಬೀಸುವ ಕಲ್ಲಿನಿಂದ ಜಜ್ಜಿ, ಬಳಿಕ ಚಾಕುವಿನಿಂದ ಇರಿದು ಬರ್ಬರವಾಗಿ ಕೊಲೆ ಮಾಡಿದ ಭೀಕರ ಘಟನೆ ಗದಗ ತಾಲೂಕಿನ ಬಿಂಕದಕಟ್ಟೆ ಗ್ರಾಮದಲ್ಲಿ ನಡೆದಿದೆ.
ಕೊಲೆಯಾದ ಮಹಿಳೆಯನ್ನು ಯಲ್ಲಮ್ಮ ಅಲಿಯಾಸ್ ಸ್ವಾತಿ (30) ಎಂದು ಗುರುತಿಸಲಾಗಿದೆ. ಹತ್ಯೆ ಮಾಡಿದ ಆರೋಪಿಯನ್ನು ರಮೇಶ್ ನರಗುಂದ ಎಂದು ಗುರುತಿಸಲಾಗಿದ್ದು, ಈತ ಗದಗ ಬಸ್ ಡಿಪೋದಲ್ಲಿ ಕಂಡಕ್ಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದ. ಈ ದಂಪತಿಗೆ ಮೂವರು ಮಕ್ಕಳಿದ್ದಾರೆ.
ಕೃತ್ಯ ಮತ್ತು ನಂತರದ ಘಟನೆ:
ಪತ್ನಿಯ ನಡತೆ ಬಗ್ಗೆ ತೀವ್ರ ಸಂಶಯ ಹೊಂದಿದ್ದ ರಮೇಶ್ ನರಗುಂದ ಅವರು, ಈ ಕುರಿತು ಆಗಾಗ ಮನೆಯಲ್ಲಿ ಕಲಹ ನಡೆಸುತ್ತಿದ್ದರು ಎನ್ನಲಾಗಿದೆ. ವಿವಾದ ತಾರಕಕ್ಕೇರಿದಾಗ, ರಮೇಶ್ ಅವರು ಯಲ್ಲಮ್ಮ ಅವರ ಮೇಲೆ ಬೀಸುವ ಕಲ್ಲನ್ನು ಎತ್ತಿ ಹಾಕಿ ಗಂಭೀರವಾಗಿ ಹಲ್ಲೆ ನಡೆಸಿದ್ದಾನೆ. ಅದಾದ ನಂತರ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ.
ಪತ್ನಿಯನ್ನು ಕೊಲೆ ಮಾಡಿದ ಬಳಿಕ, ಆರೋಪಿ ರಮೇಶ್ ಕೈಯಲ್ಲಿ ಚಾಕು ಹಿಡಿದುಕೊಂಡು ಮನೆಯಿಂದ ಹೊರಗೆ ಬಂದು ಸ್ಥಳೀಯರಿಗೆ ಬೆದರಿಕೆ ಹಾಕಿದ್ದಾನೆ. ಹತ್ತಿರ ಬಂದಲ್ಲಿ ಚಾಕುವಿನಿಂದ ಇರಿಯುವುದಾಗಿ ಬೆದರಿಸಿ ಆತಂಕ ಸೃಷ್ಟಿಸಿದ್ದಾನೆ.
ಘಟನೆಯ ಮಾಹಿತಿ ತಿಳಿದ ಕೂಡಲೇ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ. ಪೊಲೀಸರು ಆರೋಪಿ ರಮೇಶನನ್ನು ವಶಕ್ಕೆ ಪಡೆದು ಪರಿಸ್ಥಿತಿಯನ್ನು ನಿಯಂತ್ರಿಸಿದ್ದಾರೆ. ಘಟನಾ ಸ್ಥಳಕ್ಕೆ ಗದಗ ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಂಬಂಧ ಗದಗ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಪತಿಯ ಈ ಕ್ರೌರ್ಯದಿಂದಾಗಿ ಮೂವರು ಮಕ್ಕಳು ಅನಾಥರಾಗಿದ್ದು, ಗ್ರಾಮದಲ್ಲಿ ಮರಳು ಕವಿದ ವಾತಾವರಣ ನಿರ್ಮಾಣವಾಗಿದೆ.
ಹೆಚ್ಚಿನ ಮಾಹಿತಿ ಹಾಗೂ ತನಿಖೆ ಪ್ರಗತಿಯಲ್ಲಿದೆ.

