

ಕಲಘಟಗಿ: ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಕಾರ್ಮಿಕ ಸಚಿವರಾದ ಸಂತೋಷ್ ಎಸ್. ಲಾಡ್ ಅವರ ನೇತೃತ್ವದಲ್ಲಿ, ತಾಲ್ಲೂಕಿನ ಮಡಕಿಹೊನ್ನಳ್ಳಿ ಗ್ರಾಮದಲ್ಲಿ ಮೊದಲ ಬಾರಿಗೆ “ಸಂತೋಷ ಲಾಡ್ ಫೌಂಡೇಶನ್” ವತಿಯಿಂದ “ಉಚಿತ ಶ್ರವಣ ದೋಷ ಚಿಕಿತ್ಸಾ ಶಿಬಿರ”ವನ್ನು ಆಯೋಜಿಸಲಾಗಿತ್ತು. “ಶ್ರೀನಿವಾಸ್ ಹೆಲ್ತ್ ಕೇರ್, ಬೆಂಗಳೂರು” ಸಹಯೋಗದೊಂದಿಗೆ ನಡೆದ ಈ ಶಿಬಿರವು ಸಾವಿರಾರು ಜನರಿಗೆ ಉಪಕಾರಿಯಾಯಿತು.
ಕಲಘಟಗಿ ತಾಲೂಕಿನ ಸಾರ್ವಜನಿಕರಿಗೆ ಅನುಕೂಲವಾಗುವ ದೃಷ್ಟಿಯಿಂದ, ಸಚಿವರ ಮಡಿಕೀಹೊನ್ನಳ್ಳಿ ಅಮೃತ ನಿವಾಸದಲ್ಲಿ ಈ ವಿಶೇಷ ಶಿಬಿರವನ್ನು ಆಯೋಜಿಸಲಾಗಿತ್ತು. ಶಿಬಿರದಲ್ಲಿ ನೂರಾರು ಜನರು ಪಾಲ್ಗೊಂಡರು, ಮತ್ತು ತಜ್ಞ ವೈದ್ಯರ ತಂಡವು ಅವರ ಆರೋಗ್ಯ ತಪಾಸಣೆ ನಡೆಸಿ ಶ್ರವಣ ದೋಷದ ಮಟ್ಟವನ್ನು ಅಳೆಯಿತು.
ಈ ಶಿಬಿರದಲ್ಲಿ ಆಯ್ಕೆಯಾದ ಅರ್ಹ ಶ್ರವಣ ದೋಷ ವ್ಯಕ್ತಿಗಳಿಗೆ ವೈದ್ಯರ ಸಲಹೆಯ ಮೇರೆಗೆ ಸಂತೋಷ ಲಾಡ್ ಫೌಂಡೇಶನ್ ವತಿಯಿಂದ ಉಚಿತ ಶ್ರವಣ ಯಂತ್ರಗಳನ್ನು ವಿತರಿಸಲಾಗುವುದು ಎಂದು ಘೋಷಿಸಲಾಯಿತು. ಈ ಕಾರ್ಯಕ್ರಮವು ತಾಲೂಕಿನ ಜನರಿಗೆ ವೈದ್ಯಕೀಯ ಸೇವೆಗಳನ್ನು ಉಚಿತವಾಗಿ ಒದಗಿಸುವಲ್ಲಿ ಒಂದು ದೊಡ್ಡ ಹೆಜ್ಜೆಯಾಗಿದೆ.
ಈ ಸಂದರ್ಭದಲ್ಲಿ, ಸಂತೋಷ ಲಾಡ್ ಫೌಂಡೇಶನ್ ಮತ್ತು ಸಂತೋಷ ಲಾಡ್ ಅಭಿಮಾನಿ ಬಳಗದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು. ಈ ರೀತಿಯ ಜನಪರ ಕಾರ್ಯಕ್ರಮಗಳನ್ನು ಮುಂದುವರಿಸುವ ಮೂಲಕ ಸಮಾಜದ ಹಿಂದುಳಿದ ವರ್ಗದವರಿಗೆ ನೆರವು ನೀಡುವುದಾಗಿ ಫೌಂಡೇಶನ್ ತಿಳಿಸಿದೆ. ಈ ಕಾರ್ಯಕ್ರಮವು ತಾಲೂಕಿನ ಜನರ ಮೆಚ್ಚುಗೆಗೆ ಪಾತ್ರವಾಗಿದೆ.

