
ಕುಂದಗೋಳ: ತಾಲ್ಲೂಕಿನ ಯಲಿವಾಳ ಗ್ರಾಮದಲ್ಲಿ ನಿವೃತ್ತ ಪ್ರೌಢಶಾಲಾ ಶಿಕ್ಷಕರಾದ ಎಲ್.ಕೆ. ಹಿರೇಗೌಡರ ಮತ್ತು ನಿವೃತ್ತ ಪ್ರೌಢಶಾಲಾ ಮುಖ್ಯೋಪಾಧ್ಯಾಯರಾದ ಎಂ.ಕೆ. ಹಿರೇಗೌಡರ ಅವರು ಸ್ಥಾಪಿಸಿರುವ ಶಾಶ್ವತ ಶೈಕ್ಷಣಿಕ ನಿಧಿಯಿಂದ ಪ್ರತಿ ವರ್ಷದಂತೆ ಈ ವರ್ಷವೂ ಕೂಡಾ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ನಗದು ಬಹುಮಾನ ವಿತರಿಸಲಾಯಿತು. ಇತ್ತೀಚೆಗೆ ನಡೆದ ಸ್ವಾತಂತ್ರ್ಯ ದಿನಾಚರಣೆಯಂದು ಈ ಕಾರ್ಯಕ್ರಮ ಜರುಗಿತು.
ಈ ಸಾಲಿನಲ್ಲಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳಾದ ಸಹನಾ ಸಿ. ಮುರುಗಣ್ಣವರ (ಪ್ರಥಮ ಸ್ಥಾನ, 97.06%), ಶ್ರೇಯಾ ಜೆ. ಪೂಜಾರ (ದ್ವಿತೀಯ ಸ್ಥಾನ, 97.05%), ಮತ್ತು ಪ್ರೀತಿ ವೈ. ಹಿರೇಗೌಡರ (ತೃತೀಯ ಸ್ಥಾನ, 95.04%) ಅವರಿಗೆ ನಿವೃತ್ತ ಶಿಕ್ಷಕರಿಂದ ನಗದು ಬಹುಮಾನ ನೀಡಿ ಗೌರವಿಸಲಾಯಿತು.
ಇಂತಹ ಉಪಕ್ರಮದಿಂದ ವಿದ್ಯಾರ್ಥಿಗಳಲ್ಲಿ ಸ್ಪರ್ಧಾ ಮನೋಭಾವ ಬೆಳೆಯುತ್ತದೆ ಮತ್ತು ಶಿಕ್ಷಣಕ್ಕೆ ಉತ್ತೇಜನ ದೊರೆಯುತ್ತದೆ ಎಂದು ಈ ಸಂದರ್ಭದಲ್ಲಿ ಹಿರಿಯರು ಅಭಿಪ್ರಾಯಪಟ್ಟರು.

