
ಖಾಂಡ್ವಾ (ಮಧ್ಯಪ್ರದೇಶ): ಜಿಲ್ಲೆಯ ಪಂಧಾನಾ ಪ್ರದೇಶದ ಜಮ್ಲಿ (ಅರ್ಡ್ಲಾ) ಗ್ರಾಮದಲ್ಲಿ ಗುರುವಾರ ರಾತ್ರಿ ದುರ್ಗಾ ಮೂರ್ತಿ ವಿಸರ್ಜನೆಗೆ ಭಕ್ತರನ್ನು ಕರೆದೊಯ್ಯುತ್ತಿದ್ದ ಟ್ರ್ಯಾಕ್ಟರ್ ಟ್ರಾಲಿ ಕೆರೆಗೆ ಉರುಳಿಬಿದ್ದ ಪರಿಣಾಮ ಕನಿಷ್ಠ 11 ಜನರು ಸಾವನ್ನಪ್ಪಿದ್ದಾರೆ. ಮೃತರ ಪೈಕಿ ಏಳು ಬಾಲಕಿಯರು ಮತ್ತು ನಾಲ್ಕು ಬಾಲಕರು ಸೇರಿ ಒಟ್ಟು ಎಂಟು ಅಪ್ರಾಪ್ತರು ಇರುವುದು ದೃಢಪಟ್ಟಿದೆ.
ಅಧಿಕಾರಿಗಳ ಪ್ರಕಾರ, ಅರ್ಡ್ಲಾ ಮತ್ತು ಜಮ್ಲಿ ಗ್ರಾಮಗಳ ಸುಮಾರು 20-25 ಯುವ ಜನರು ಟ್ರಾಲಿಯಲ್ಲಿ ಪ್ರಯಾಣಿಸುತ್ತಿದ್ದಾಗ ಈ ಭೀಕರ ಅಪಘಾತ ಸಂಭವಿಸಿದೆ. ಟ್ರ್ಯಾಕ್ಟರ್ ಅನ್ನು ಆಳವಾದ ನೀರಿಗೆ ಇಳಿಸುವಾಗ ಸಮತೋಲನ ಕಳೆದುಕೊಂಡು ಪಲ್ಟಿಯಾಗಿದೆ.
ಎಚ್ಚರಿಕೆ ಲೆಕ್ಕಿಸದೆ ದುಸ್ಸಾಹಸ: ಸ್ಥಳೀಯ ಗ್ರಾಮ ಕಾವಲುಗಾರರು (ಕೋತ್ವಾರ್) ಟ್ರ್ಯಾಕ್ಟರ್ ಚಾಲಕನಿಗೆ ವಾಹನವನ್ನು ಆಳವಾದ ನೀರಿಗೆ ಇಳಿಸದಂತೆ ಎಚ್ಚರಿಕೆ ನೀಡಿದ್ದರೂ, ಅದನ್ನು ಲೆಕ್ಕಿಸದೆ ಚಾಲಕ ಮುಂದುವರೆದಿದ್ದಾನೆ. ಕೆರೆಯಲ್ಲಿ ಹಿಮ್ಮುಖವಾಗಿ ಚಲಿಸುವಾಗ ಟ್ರ್ಯಾಕ್ಟರ್ ಕಲ್ಲೊಂದಕ್ಕೆ ತಾಗಿ ಪಲ್ಟಿಯಾಗಿ, ಎಲ್ಲರೂ ಕೆರೆಗೆ ಬಿದ್ದಿದ್ದಾರೆ. ಹಲವರು ಈಜಿ ದಡ ಸೇರಿದ್ದಾರೆ, ಆದರೆ 11 ಜನರನ್ನು ರಕ್ಷಿಸಲು ಸಾಧ್ಯವಾಗಲಿಲ್ಲ ಎಂದು ಡಿಐಜಿ ಸಿದ್ಧಾರ್ಥ್ ಬಹುಗುಣ ದೃಢಪಡಿಸಿದ್ದಾರೆ.
ಸಂತಾಪ, ಪರಿಹಾರ ಘೋಷಣೆ
ಘಟನೆಯ ಬಗ್ಗೆ ಮಧ್ಯಪ್ರದೇಶದ ಮುಖ್ಯಮಂತ್ರಿ ಮೋಹನ್ ಯಾದವ್ ಅವರು ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ.
“ಖಾಂಡ್ವಾದ ಜಮ್ಲಿ ಗ್ರಾಮ ಮತ್ತು ಉಜ್ಜಯಿನಿ ಬಳಿಯ ಇಂಗೋರಿಯಾ ಪೊಲೀಸ್ ಠಾಣೆ ಪ್ರದೇಶದಲ್ಲಿ ದುರ್ಗಾ ವಿಸರ್ಜನೆ ಸಮಾರಂಭದ ವೇಳೆ ಸಂಭವಿಸಿದ ಅಪಘಾತಗಳು ಅತ್ಯಂತ ದುರಂತಕಾರಿ. ಮೃತರ ಕುಟುಂಬಗಳಿಗೆ ನಾನು ನನ್ನ ಸಂತಾಪಗಳನ್ನು ವ್ಯಕ್ತಪಡಿಸುತ್ತೇನೆ,” ಎಂದು ಮುಖ್ಯಮಂತ್ರಿಗಳು ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ.
ಮೃತರ ಕುಟುಂಬಗಳಿಗೆ ತಲಾ ₹4 ಲಕ್ಷ ಆರ್ಥಿಕ ನೆರವು ನೀಡುವಂತೆ ಮತ್ತು ಗಾಯಗೊಂಡವರಿಗೆ ಹತ್ತಿರದ ಆಸ್ಪತ್ರೆಗಳಲ್ಲಿ ಸೂಕ್ತ ಚಿಕಿತ್ಸೆ ನೀಡುವುದನ್ನು ಖಚಿತಪಡಿಸಿಕೊಳ್ಳುವಂತೆ ಸೂಚಿಸಲಾಗಿದೆ ಎಂದು ಮುಖ್ಯಮಂತ್ರಿ ಮೋಹನ್ ಯಾದವ್ ಅವರು ಪರಿಹಾರ ಘೋಷಣೆ ಮಾಡಿದ್ದಾರೆ.
ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಕಚೇರಿಯೂ ಘಟನೆಯ ಬಗ್ಗೆ ಸಂತಾಪ ವ್ಯಕ್ತಪಡಿಸಿದ್ದು, ಪ್ರಧಾನ ಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿಯಿಂದ (PMNRF) ಮೃತರ ಕುಟುಂಬಕ್ಕೆ ತಲಾ ₹2 ಲಕ್ಷ ಮತ್ತು ಗಾಯಾಳುಗಳಿಗೆ ₹50,000 ಪರಿಹಾರ ನೀಡುವುದಾಗಿ ಘೋಷಿಸಿದೆ.

