ಚಿಕ್ಕನೇರ್ತಿ: 60 ಎಕರೆ ಆಸ್ತಿ ವಿವಾದ ಬಲಿ? ಅಟ್ಟದಲ್ಲಿ ಶವವಾದ ಯುವಕ: 8 ಜನರ ವಿರುದ್ಧ ‘ಕಿರುಕುಳ’ ಆರೋಪದಡಿ ಎಫ್‌ಐಆರ್

Spread the love

ಕುಂದಗೋಳ: ಆಸ್ತಿ ಕಲಹಕ್ಕೆ ಸಂಬಂಧಿಸಿದಂತೆ ಕೆಲವರಿಂದ ತೀವ್ರ ಮಾನಸಿಕ ಕಿರುಕುಳಕ್ಕೆ ಒಳಗಾಗಿದ್ದ ಕುಂದಗೋಳ ತಾಲ್ಲೂಕು ಚಿಕ್ಕನೇರ್ತಿ ಗ್ರಾಮದ ಯುವಕನೋರ್ವ ಮನೆಯ ಅಟ್ಟದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಈ ಘಟನೆಗೆ ಕಿರುಕುಳವೇ ಕಾರಣ ಎಂದು ಮೃತನ ಕುಟುಂಬಸ್ಥರು ದೂರು ನೀಡಿದ್ದು, ಪೊಲೀಸರು ಒಟ್ಟು ಎಂಟು ಮಂದಿ ಆರೋಪಿಗಳ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಗಂಭೀರ ಆರೋಪದಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

ಮೃತರನ್ನು ಚಿಕ್ಕನೇರ್ತಿ ಗ್ರಾಮದ ನಿವಾಸಿ, 23 ವರ್ಷದ ಫಕ್ಕೀರೇಶ ಹನಮಂತಪ್ಪ ತಡಸದ ಎಂದು ಗುರುತಿಸಲಾಗಿದೆ. ಕೃಷಿ ಕೆಲಸ ಮಾಡಿಕೊಂಡಿದ್ದ ಈ ಯುವಕ, ಅಕ್ಟೋಬರ್ 15, 2025 ರಂದು ಮುಂಜಾನೆ 4:00 ರಿಂದ 4:30 ಗಂಟೆಯ ನಡುವಿನ ಅವಧಿಯಲ್ಲಿ ತಮ್ಮ ಮನೆಯ ಮೇಲಿನ ಮಹಡಿಗೆ ಹಾಕಿದ ಕಟ್ಟಿಗೆಯ ಕಂಬಿಗೆ ಹಗ್ಗದಿಂದ ನೇಣು ಹಾಕಿಕೊಂಡು ಮೃತಪಟ್ಟಿದ್ದಾನೆ ಎಂದು ಪೊಲೀಸ್ ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಫಕ್ಕೀರೇಶನ ಸಾವಿಗೆ ಆಸ್ತಿ ವಿವಾದವೇ ಮೂಲ ಕಾರಣ ಎಂದು ಕುಟುಂಬ ಸದಸ್ಯರು ಗಂಭೀರ ಆರೋಪ ಮಾಡಿದ್ದಾರೆ. ಯುವಕನ ಅಜ್ಜನ ಆಸ್ತಿಯಲ್ಲಿ ಸುಮಾರು 20 ಎಕರೆ ಪಾಲು ಬೇಕೆಂದು ಕೆಲವರು ಕೋರ್ಟ್‌ ಮೂಲಕ ನೋಟಿಸ್ ಕಳುಹಿಸಿ ಮಾನಸಿಕವಾಗಿ ಹಿಂಸೆ ನೀಡುತ್ತಿದ್ದರು. ಅಷ್ಟೇ ಅಲ್ಲದೆ, ಮನೆ ಮತ್ತು ಹಿತ್ತಲಿನಲ್ಲಿ ಪಾಲು ನೀಡಬೇಕೆಂದು ಆಗಾಗ ದೂರವಾಣಿ ಕರೆಗಳ ಮೂಲಕವೂ ತೀವ್ರ ಕಿರುಕುಳ ನೀಡುತ್ತಿದ್ದರು ಎನ್ನಲಾಗಿದೆ. ಈ ಮಾನಸಿಕ ಒತ್ತಡವನ್ನು ತಡೆದುಕೊಳ್ಳಲಾಗದೇ ಫಕ್ಕೀರೇಶ ಆತ್ಮಹತ್ಯೆಯ ನಿರ್ಧಾರಕ್ಕೆ ಬಂದಿದ್ದಾನೆ ಎಂದು ಹೇಳಲಾಗಿದೆ.

ಮೃತರ ತಂದೆ ನೀಡಿದ ದೂರಿನನ್ವಯ ಪೊಲೀಸರು ಒಟ್ಟು ಎಂಟು ಮಂದಿಯನ್ನು ಆರೋಪಿಗಳೆಂದು ಹೆಸರಿಸಿದ್ದಾರೆ. ಆರೋಪಿಗಳಾದ ಕಿರಟಗೇರಿಯ ಶಿವುನಗೌಡ ಸಂಕನಗೌಡ್ರ (50) ಮತ್ತು ಅಣ್ಣಪ್ಪ ಸಂಕನಗೌಡ್ರ (46), ಬ್ಯಾಹಟ್ಟಿಯ ಬಸಪ್ಪ ರೋಗಿ (60) ಮತ್ತು ಕಲ್ಲಪ್ಪ ರೋಗಿ (80), ಹುಲ್ಲೂರದ ಮುದಕಪ್ಪ ರಗಟಿ (50) ಮತ್ತು ಶರಣಪ್ಪ ರಗಟಿ (40), ಮಂಟೂರಿನ ರಾಯಮ್ಮ (50) ಹಾಗೂ ಇತರ ಕೆಲವರ ವಿರುದ್ಧ ಸೂಕ್ತ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೋಲಿಸ್ ಮೂಲಗಳಿಂದ ತಿಳಿದುಬಂದಿದೆ.

Leave a Reply

Your email address will not be published. Required fields are marked *