
ಚಿಕ್ಕಮಗಳೂರು: ‘ಮಲೆನಾಡಿನ ಗಾಂಧಿ’ ಎಂದೇ ಖ್ಯಾತರಾಗಿದ್ದ ಮಾಜಿ ಸಚಿವ ದಿವಂಗತ ಎಚ್.ಜಿ. ಗೋವಿಂದೇಗೌಡರ ಕುಟುಂಬದ ಮನೆಯಲ್ಲಿ ಕಳ್ಳತನ ನಡೆದಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲ್ಲೂಕಿನಲ್ಲಿ ಬೆಳಕಿಗೆ ಬಂದಿದೆ. ಮನೆಯ ಕೆಲಸಕ್ಕೆ ಸೇರಿದ್ದ ನೇಪಾಳ ಮೂಲದ ದಂಪತಿ, ₹7 ಲಕ್ಷ ನಗದು ಮತ್ತು ಚಿನ್ನಾಭರಣಗಳನ್ನು ಕದ್ದು ಪರಾರಿಯಾಗಿದ್ದಾರೆ.
ಗೋವಿಂದೇಗೌಡರ ಪುತ್ರ ವೆಂಕಟೇಶ್ ಅವರು ನೀಡಿದ ದೂರಿನ ಪ್ರಕಾರ, ಕಳ್ಳತನವು ಕೊಪ್ಪ ತಾಲ್ಲೂಕಿನ ಮಣಿಪುರ ಎಸ್ಟೇಟ್ನಲ್ಲಿ ನಡೆದಿದೆ. ಕೇವಲ 15 ದಿನಗಳ ಹಿಂದೆ ಮನೆಯ ಕೆಲಸಕ್ಕೆ ಸೇರಿದ್ದ ನೇಪಾಳ ಮೂಲದ ದಂಪತಿ ಈ ಕೃತ್ಯ ಎಸಗಿದ್ದಾರೆ. ಹಿಂದಿನ ರಾತ್ರಿ ಮನೆಯಲ್ಲಿದ್ದವರು ನಿದ್ರೆಗೆ ಜಾರಿದಾಗ, ದಂಪತಿ ಮನೆಯಲ್ಲಿದ್ದ ನಗದು ಮತ್ತು ಆಭರಣಗಳನ್ನು ಕದ್ದು ನಾಪತ್ತೆಯಾಗಿದ್ದಾರೆ.
ಘಟನೆಯ ಬಗ್ಗೆ ಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ನಾಪತ್ತೆಯಾಗಿರುವ ದಂಪತಿಗಾಗಿ ತೀವ್ರ ಶೋಧ ನಡೆಸುತ್ತಿದ್ದಾರೆ. ಕಳ್ಳರನ್ನು ಶೀಘ್ರವೇ ಬಂಧಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

