
ಬೆಂಗಳೂರು: ರಾಜಕೀಯದಲ್ಲಿ ಯಾವಾಗಲೂ ಹಗೆ ಸಾಮಾನ್ಯ- ಸಚಿವ ಸತೀಶ್ ಜಾರಕಿಹೊಳಿ
ಬೆಂಗಳೂರು: ರಾಜಕೀಯದಲ್ಲಿ ಯಾವಾಗಲೂ ಹಗೆ ಇರುವುದು ಸಾಮಾನ್ಯ. ನಾವು ಯಾವಾಗಲೂ ಎಚ್ಚರಿಕೆಯಿಂದ ಮತ್ತು ದೃಢವಾಗಿ ಇರಬೇಕಾಗುತ್ತದೆ. ರಾಜಕೀಯದಲ್ಲಿ ಇದೇ ಪರಿಸ್ಥಿತಿ ಶಾಶ್ವತವಾಗಿ ಇರುವುದಿಲ್ಲ, ಬದಲಾವಣೆಯಾಗಲೂಬಹುದು ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.
ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಹಕಾರ ಸಚಿವ ಕೆ.ಎನ್. ರಾಜಣ್ಣ ಅವರ ವಜಾ ಕುರಿತು ಪ್ರತಿಕ್ರಿಯೆ ನೀಡಿದರು. “ರಾಜಣ್ಣ ಅವರು ಸ್ವತಃ ದೆಹಲಿಗೆ ತೆರಳಿ ಹೈಕಮಾಂಡ್ ನಾಯಕರನ್ನು ಭೇಟಿ ಮಾಡುತ್ತಾರೆ. ಪಕ್ಷದ ನಾಯಕರಿಗೆ ಸ್ಪಷ್ಟನೆ ನೀಡುತ್ತಾರೆ. ಮುಂದಿನ ದಿನಗಳಲ್ಲಿ ಈ ವಿಷಯ ಬಗೆಹರಿಯಲಿದೆ” ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಇದೇ ವೇಳೆ, ಸಮುದಾಯವನ್ನೇ ಟಾರ್ಗೆಟ್ ಮಾಡಲಾಗುತ್ತಿದೆ ಎಂಬ ಆರೋಪವನ್ನು ಅವರು ತಳ್ಳಿಹಾಕಿದರು. “ಇದು ಉದ್ದೇಶಪೂರ್ವಕವಾಗಿ ಆಗಿರುವ ಘಟನೆಯಲ್ಲ. ನಾಗೇಂದ್ರ ಅವರ ಪ್ರಕರಣವೇ ಬೇರೆ, ಈ ಘಟನೆಯೇ ಬೇರೆ. ರಾಜಣ್ಣ ಅವರೇ ಇದರ ಬಗ್ಗೆ ಮುಂದಿನ ದಿನಗಳಲ್ಲಿ ವಿವರಣೆ ನೀಡಲಿದ್ದಾರೆ” ಎಂದು ಅವರು ಸ್ಪಷ್ಟಪಡಿಸಿದರು.
ಸಚಿವ ಎಚ್ ಕೆ ಪಾಟೀಲ ಈ ಬಗ್ಗೆ ಮಾತನಾಡುವುದು ಔಚಿತ್ಯವಲ್ಲ:
ಸಚಿವ ಎಚ್.ಕೆ. ಪಾಟೀಲ್ ಅವರು ಈ ವಿಷಯದ ಕುರಿತು ಪ್ರತಿಕ್ರಿಯೆ ನೀಡಲು ನಿರಾಕರಿಸಿದರು. “ರಾಜಣ್ಣ ಅವರನ್ನು ವಜಾಗೊಳಿಸಿರುವ ಬಗ್ಗೆ ನನಗೆ ಕಾರಣ ತಿಳಿದಿಲ್ಲ. ನಮ್ಮದು ಶಿಸ್ತಿನ ಪಕ್ಷ. ಹೈಕಮಾಂಡ್ ಈ ಬಗ್ಗೆ ತೀರ್ಮಾನ ತೆಗೆದುಕೊಂಡಿದೆ. ನಾನು ಈ ವಿಚಾರವಾಗಿ ಯಾವುದೇ ಮಾಧ್ಯಮಗಳಲ್ಲಿ ಮಾತನಾಡುವುದಿಲ್ಲ. ನಮ್ಮ ನಡುವೆ ಈ ವಿಷಯವನ್ನು ಚರ್ಚಿಸುವುದು ಕೂಡ ಔಚಿತ್ಯವಲ್ಲ” ಎಂದಷ್ಟೇ ಹೇಳಿ ಮಾತು ಮುಗಿಸಿದರು.

