
ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧಿತರಾಗಿರುವ ನಟ ದರ್ಶನ್ ಅವರ ವಕೀಲರು, ದರ್ಶನ್ರನ್ನು ಬಳ್ಳಾರಿ ಜೈಲಿಗೆ ಸ್ಥಳಾಂತರಿಸಲು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿದೆ. ಈ ಆದೇಶವು ದರ್ಶನ್ ಮತ್ತು ಅವರ ತಂಡಕ್ಕೆ ತಾತ್ಕಾಲಿಕ ಸಮಾಧಾನ ತಂದಿದೆ. ಇದರ ಜೊತೆಗೆ, ಜೈಲಿನಲ್ಲಿ ಕನಿಷ್ಠ ಮೂಲಭೂತ ಸೌಲಭ್ಯಗಳನ್ನು ನೀಡುವಂತೆ ನ್ಯಾಯಾಲಯ ಸೂಚಿಸಿದೆ.
ಕಳೆದ ಕೆಲವು ದಿನಗಳಿಂದ ಜೈಲಿನಲ್ಲಿ ದೊರೆಯುತ್ತಿರುವ ಸೌಲಭ್ಯಗಳ ಕೊರತೆ ಬಗ್ಗೆ ದರ್ಶನ್ ಕಣ್ಣೀರು ಹಾಕಿದ್ದು, “ನನಗೆ ಬದುಕಲು ಆಗುತ್ತಿಲ್ಲ, ಸ್ವಲ್ಪ ವಿಷ ಕೊಡಿ” ಎಂದು ನ್ಯಾಯಾಲಯದ ಮುಂದೆ ಗಳಗಳನೆ ಅಳಲು ತೋಡಿಕೊಂಡಿದ್ದರು ಎಂದು ವರದಿಯಾಗಿದೆ. ಈ ಕುರಿತು ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆದ ವಿಚಾರಣೆ ವೇಳೆ, ದರ್ಶನ್ ಸೇರಿದಂತೆ ಏಳು ಆರೋಪಿಗಳು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ದರ್ಶನ್ಗೆ ಸಿಕ್ಕ ಸೌಲಭ್ಯಗಳು
ಜೈಲಿನಲ್ಲಿ ಹಾಸಿಗೆ ಮತ್ತು ದಿಂಬು ಸಿಗದೆ ಕಷ್ಟವಾಗುತ್ತಿದೆ ಎಂದು ದರ್ಶನ್ ಮನವಿ ಮಾಡಿಕೊಂಡಿದ್ದರು. ಇದಕ್ಕೆ ಸ್ಪಂದಿಸಿದ ನ್ಯಾಯಾಲಯ, ಜೈಲು ಕೈಪಿಡಿ (ಮ್ಯಾನ್ಯುವಲ್) ಪ್ರಕಾರ ಒಂದು ತಟ್ಟೆ, ಲೋಟ, ಜಮಖಾನ, ಬೆಡ್ಶೀಟ್, ಹಾಸಿಗೆ ಮತ್ತು ದಿಂಬು ನೀಡಲು ಅನುಮತಿ ನೀಡಿದೆ. ಸಾಮಾನ್ಯ ಕೈದಿಗಳಿಗೆ ಇರುವ ಎಲ್ಲಾ ಕನಿಷ್ಠ ಸೌಲಭ್ಯಗಳನ್ನು ದರ್ಶನ್ಗೂ ನೀಡಬೇಕು ಎಂದು ನ್ಯಾಯಾಲಯ ಆದೇಶಿಸಿದೆ. ಈ ಹಿಂದೆ, ದರ್ಶನ್ಗೆ ಮನೆಯಿಂದ ಬಟ್ಟೆ, ಹೊರಗಿನಿಂದ ಊಟದಂತಹ ವಿಶೇಷ ಸೌಲಭ್ಯಗಳು ದೊರೆಯುತ್ತಿದ್ದವು. ಆದರೆ ಸುಪ್ರೀಂ ಕೋರ್ಟ್ ಆದೇಶದ ಬಳಿಕ ಅವೆಲ್ಲವೂ ನಿಂತಿದ್ದು, ಸಾಮಾನ್ಯ ಕೈದಿಯಂತೆ ಜೈಲಿನ ಬಟ್ಟೆ ಮತ್ತು ಊಟ ಮಾಡಬೇಕಾಗಿದೆ.
ಬಳ್ಳಾರಿ ಜೈಲಿಗೆ ವರ್ಗಾವಣೆ ಇಲ್ಲ
ದರ್ಶನ್ರನ್ನು ಬಳ್ಳಾರಿ ಜೈಲಿಗೆ ವರ್ಗಾಯಿಸುವಂತೆ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದ ನ್ಯಾಯಾಧೀಶರು, ಜೈಲು ನಿಯಮಗಳನ್ನು ಉಲ್ಲಂಘಿಸಿದರೆ ಐ.ಜಿ (ಇನ್ಸ್ಪೆಕ್ಟರ್ ಜನರಲ್) ಹೊಣೆಗಾರರಾಗುತ್ತಾರೆ ಎಂದು ಎಚ್ಚರಿಕೆ ನೀಡಿದ್ದಾರೆ. ಸದ್ಯಕ್ಕೆ ದರ್ಶನ್ರನ್ನು ಬಳ್ಳಾರಿಗೆ ಕಳುಹಿಸಲು ಯಾವುದೇ ಸೂಕ್ತ ಕಾರಣಗಳಿಲ್ಲ ಎಂದು ನ್ಯಾಯಾಲಯ ಹೇಳಿದೆ.
ದರ್ಶನ್ಗೆ ಮಾನಸಿಕ ಹಾಗೂ ದೈಹಿಕ ಸಂಕಷ್ಟ
ದರ್ಶನ್ ಜೈಲಿನಲ್ಲಿ ಸಾಮಾನ್ಯ ಕೈದಿಯಂತೆ ಜೀವನ ನಡೆಸುತ್ತಿರುವುದಾಗಿ ತಿಳಿದುಬಂದಿದೆ. ಪ್ರತಿದಿನ ಜಿಮ್ನಲ್ಲಿ ವ್ಯಾಯಾಮ ಮಾಡುತ್ತಿದ್ದ ಅವರು ಈಗ ವರ್ಕೌಟ್ಗೆ ಅವಕಾಶವಿಲ್ಲದೆ, ಡಯಟ್ ಆಹಾರವಿಲ್ಲದೆ ದೈಹಿಕವಾಗಿ ದುರ್ಬಲರಾಗಿದ್ದಾರೆ. ಇದರ ಜೊತೆಗೆ, ಜೈಲು ಬಟ್ಟೆಗಳನ್ನು ತಾವೇ ತೊಳೆಯಬೇಕಾಗಿರುವುದರಿಂದ ಕೈಗಳಿಗೆ ಸೋಂಕು ತಗುಲಿರುವುದಾಗಿ ದರ್ಶನ್ ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ಜೈಲು ಕೋಣೆಯಿಂದ ಹೊರಗೆ ಬರುವುದಿಲ್ಲವಾದ್ದರಿಂದ ಬಿಸಿಲು ಕೂಡ ಬೀಳುತ್ತಿಲ್ಲ ಎಂದು ದರ್ಶನ್ ಕಣ್ಣೀರು ಹಾಕಿದ್ದಾರೆ. ಈ ಎಲ್ಲಾ ಕಾರಣಗಳಿಂದ ಮಾನಸಿಕವಾಗಿ ಮತ್ತು ದೈಹಿಕವಾಗಿ ಕುಗ್ಗಿದ ದರ್ಶನ್, “ನನಗೆ ವಿಷ ಕೊಟ್ಟುಬಿಡಿ” ಎಂದು ಮನವಿ ಮಾಡಿಕೊಂಡಿದ್ದಾರೆ. ಆದರೂ, ಜೈಲಿನ ಹೊರಗೆ ಓಡಾಡಲು ಅವಕಾಶ ನೀಡಬೇಕು ಎಂಬ ಅವರ ಕೋರಿಕೆಗೆ ನ್ಯಾಯಾಲಯ ಸಕಾರಾತ್ಮಕವಾಗಿ ಸ್ಪಂದಿಸಿದೆ.

