ಮಳೆಹಾನಿ: ಕುಂದಗೋಳದಲ್ಲಿ ಹೆಸರು, ಉದ್ದು,ಸೇರಿದಂತೆ ವಿವಿಧ ಬೆಳೆ ನಾಶ, ಪರಿಶೀಲನೆ ನಡೆಸಿದ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ತಂಡ

Spread the love

ಕುಂದಗೋಳ: ಕಳೆದ ಕೆಲವು ದಿನಗಳಿಂದ ಸುರಿದ ಭಾರೀ ಮಳೆಯಿಂದಾಗಿ ತಾಲ್ಲೂಕಿನಲ್ಲಿ ಹೆಸರು ಮತ್ತು ಉದ್ದು ಸೇರಿದಂತೆ ವಿವಿಧ ಬೆಳೆಗಳು ಸಂಪೂರ್ಣವಾಗಿ ನಾಶವಾಗಿದ್ದು, ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಪರಿಸ್ಥಿತಿಯ ಗಂಭೀರತೆಯನ್ನು ಮನಗಂಡ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ರಾಜ್ಯಮಟ್ಟದ ಅಧಿಕಾರಿಗಳ ತಂಡ ಸೋಮವಾರದಂದು ತಾಲ್ಲೂಕಿಗೆ ಭೇಟಿ ನೀಡಿ ಬೆಳೆ ಹಾನಿ ಪರಿಶೀಲನೆ ನಡೆಸಿತು.

ಪ್ರಾಧಿಕಾರದ ಅಧಿಕಾರಿ ಮಂಜುಳಮ್ಮ ನೇತೃತ್ವದ ತಂಡವು ಕುಂದಗೋಳ, ಶಿರೂರ, ಬಸಾಪೂರ, ಹಿರೇನೇರ್ತಿ, ಮುಳ್ಳೋಳ್ಳಿ, ಯರಿನಾರಾಯಣಪುರ ಮತ್ತು ಬೆನಕನಹಳ್ಳಿ ಸೇರಿದಂತೆ ಹಲವು ಗ್ರಾಮಗಳಿಗೆ ತೆರಳಿ ರೈತರೊಂದಿಗೆ ಸಂವಾದ ನಡೆಸಿತು. ಈ ಸಮಯದಲ್ಲಿ ರೈತರು ಮತ್ತು ರೈತ ಮುಖಂಡರು ತಮ್ಮ ಕಷ್ಟಗಳನ್ನು ಅಧಿಕಾರಿಗಳ ಮುಂದೆ ತೆರೆದಿಟ್ಟರು.

ರೈತರ ಅಳಲು:
ಶೇ. 90ರಷ್ಟು ಬೆಳೆಗಳು ಮಳೆಹಾನಿಯಿಂದಾಗಿ ಹಾಳಾಗಿದ್ದು, ಮಾರುಕಟ್ಟೆಯಲ್ಲಿ ಬೆಲೆ ಸಿಗುತ್ತಿಲ್ಲ ಎಂದು ರೈತರು ಅಳಲು ತೋಡಿಕೊಂಡರು. “ಬೀಜಕ್ಕಾಗಿ ಕೂಡ ಬೆಳೆ ಉಳಿದಿಲ್ಲ. ಮನೆಯಲ್ಲಿ ತಿನ್ನಲು ಸಹ ಇಟ್ಟುಕೊಳ್ಳಲು ಸಾಧ್ಯವಾಗುತ್ತಿಲ್ಲ,” ಎಂದು ರೈತರು ತಮ್ಮ ಸಂಕಷ್ಟವನ್ನು ವಿವರಿಸಿದರು. ತಮ್ಮ ವರ್ಷವಿಡೀ ಬೆಳೆದ ಬೆಳೆಗೆ ಹೀಗಾದಾಗ, ತಲೆ ಮೇಲೆ ಕೈ ಹೊತ್ತುಕೊಂಡು ಕುಳಿತುಕೊಳ್ಳುವಂತಹ ಪರಿಸ್ಥಿತಿ ಬಂದಿದೆ ಎಂದು ನೋವು ವ್ಯಕ್ತಪಡಿಸಿದರು.

ಪರಿಹಾರದ ಭರವಸೆ:
ಪರಿಶೀಲನಾ ತಂಡವು ಹಾನಿಗೊಳಗಾದ ಪ್ರದೇಶಗಳ ಸಮೀಕ್ಷೆ ನಡೆಸಿದ ನಂತರ, ತಾಲ್ಲೂಕು ತಹಶೀಲ್ದಾರ್ ರಾಜು ಮಾವರಕರ್ ಮಾತನಾಡಿ, “ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದಿಂದ ಬಂದ ಅಧಿಕಾರಿ ಮಂಜುಳಮ್ಮ ಅವರು ಮಳೆಹಾನಿಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ ನೀಡಿ ಹೆಸರು, ಉದ್ದು ಮತ್ತು ಇತರ ಬೆಳೆಗಳ ಸಮೀಕ್ಷೆ ಮಾಡಿದ್ದಾರೆ. ನಾವು ಸರ್ಕಾರಕ್ಕೆ ಹಾನಿ ವರದಿ ಸಲ್ಲಿಸುತ್ತೇವೆ ಮತ್ತು ಪರಿಹಾರಕ್ಕಾಗಿ ಮನವಿ ಮಾಡುತ್ತೇವೆ ಎಂದು ಅವರು ಭರವಸೆ ನೀಡಿದ್ದಾರೆ,” ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಧಾರವಾಡ ಕೃಷಿ ಜಂಟಿ ನಿರ್ದೇಶಕ ಮಂಜುನಾಥ ಅಂತರವಳ್ಳಿ, ಸಹಾಯಕ ಕೃಷಿ ನಿರ್ದೇಶಕ ಭಾರತಿ ಮೇಣಸಿನಕಾಯಿ, ಕಂದಾಯ ನಿರೀಕ್ಷಕರು, ಗ್ರಾಮ ಆಡಳಿತ ಅಧಿಕಾರಿಗಳು ಮತ್ತು ರೈತ ಮುಖಂಡರು ಉಪಸ್ಥಿತರಿದ್ದರು. ರೈತರಿಗೆ ಸೂಕ್ತ ಪರಿಹಾರ ಸಿಗುವುದೇ ಎಂದು ಕಾದು ನೋಡಬೇಕಿದೆ.

Leave a Reply

Your email address will not be published. Required fields are marked *